ಕನ್ನಡದ ಪ್ರತಿಭಾವಂತ ಪತ್ರಕರ್ತರಲ್ಲಿ ವೈ.ಎನ್.ಕೃಷ್ಣಮೂರ್ತಿ ಅವರು ಮೇರು ಪಂಕ್ತಿಯಲ್ಲಿ ನಿಲ್ಲುತ್ತಾರೆ. ಇವರನ್ನು ವೈ.ಎನ್.ಕೆ ಎಂದೂ ಕರೆಯಲಾಗುತ್ತದೆ. ತಮ್ಮ ತೀಕ್ಷ್ಣ ಮತ್ತು ಪನ್‌ಗಳಿಗೆ ವೈಎನ್‌ಕೆ ಪ್ರಸಿದ್ಧರು. === ಹುಟ್ಟು ಮತ್ತು ಬೆಳವಣಿಗೆ === ಮೇ ೧೬, ೧೯೨೬ರಲ್ಲಿ ಬೆಂಗಳೂರಿನಲ್ಲಿ ವೈ.ಎನ್.ಕೆಯವರು ಜನಿಸುತ್ತಾರೆ. ಇವರ ತಂದೆ ನಾರಾಯಣಮೂರ್ತಿ. ಕತೆಗಾರರೂ ಆಗಿದ್ದ ನಾರಾಯಣಮೂರ್ತಿಯವರ ಹುಟ್ಟೂರು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಸಮೀಪದ ಯಳಂದೂರು. ಸಾಹಿತ್ಯದ ವಾತಾವರಣ ಕುಟುಂಬದಲ್ಲಿದ್ದುದರಿಂದ ಓದುವ ಹವ್ಯಾಸ ಬಾಲ್ಯದಿಂದಲೇ ವೈ.ಎನ್.ಕೆಯವರಿಗೆ ಬಂದಿತು. ತಮ್ಮ ಪ್ರಾಥಮಿಕ ಶಿಕ್ಷಣದ ನಂತರ ವೈಎನ್‌ಕೆಯವರು ಇಂಜಿನಿಯರಿಂಗ್ ಪದವಿಗೆ ಸೇರಿದರು. ಪ್ರತಿಭಾವಂತರಾಗಿದ್ದ ವೈಎನ್‌ಕೆಯವರು ವೃತ್ತಿ ಶಿಕ್ಷಣವನ್ನು ಮೊದಲ ಸ್ಥಾನದಲ್ಲಿ ಪೂರೈಸಿದರು. === ಪತ್ರಿಕೆಯ ಸಂಪರ್ಕ === ಬಾಲಕನಾಗಿದ್ದಾಗಲೇ ವೈಎನ್‌ಕೆಯವರು ‘ಬಾಲಚಂದ್ರ’ ಎಂಬ ಹಸ್ತಪತ್ರಿಕೆ ಪತ್ರಿಕೆಯನ್ನು ನಡೆಸುತ್ತಿದ್ದರು. ನಂತರ ಅವರು ದೇಶಬಂಧು, ಛಾಯಾ ಮುಂತಾದ ಅನೇಕ ಪತ್ರಿಕೆಗಳಿಗೆ ಲೇಖನವನ್ನು ಬರೆಯತೊಡಗಿದರು. ವೃತ್ತಿಗಾಗಿ ಪ್ರಜಾವಾಣಿ ಪತ್ರಿಕೆಯನ್ನು ಸೇರಿದ ಅವರು ಪತ್ರಿಕಾ ರಂಗದಲ್ಲಿ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಸಾಮಾನ್ಯ ಪತ್ರಕರ್ತನಾಗಿ ಕೆಲಸಕ್ಕೆ ಸೇರಿದ ನಂತರ ಒಂದೊಂದೇ ಹುದ್ದೆಗಳನ್ನು ಮೇಲೇರುತ್ತಾ ಹೋಗಿ ಪ್ರಧಾನ ಸಂಪಾದಕರೂ ಆದರು. ಅವರು ಸಂಪಾದಕರಾಗಿ ನಿವೃತ್ತರಾಗಿದ್ದು ೧೯೮೪ರಲ್ಲಿ. === ಕನ್ನಡಪ್ರಭದಲ್ಲಿ ವೈ.ಎನ್.ಕೆ === ೧೯೮೯ರಲ್ಲಿ ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ವೈ.ಎನ್.ಕೆಯವರು ಹುದ್ದೆಯನ್ನು ವಹಿಸಿಕೊಂಡು ಪತ್ರಿಕೋದ್ಯಮದಲ್ಲಿ ಹಲವಾರು ಕ್ರಾಂತಿಕಾರಕ ಬದಲಾವಣೆಗಳಿಗೆ ಮುನ್ನುಡಿ ಬರೆದರು. ದಿನಕ್ಕೊಂದು ಅಂಕಣ, ಸಾಹಿತ್ಯ ಲೋಕ, ಇಪ್ಪತ್ತೈದು ವರ್ಷಗಳ ಮುಂದೆ, ಜಿಲ್ಲಾ ತರಂಗ, ವಿತ್ತಪ್ರಭ, ಆರೋಗ್ಯ ಪ್ರಭ, ವಿದ್ಯಾಕುಸುಮ- ಹೀಗೆ ಹೊಸ ಪುರವಣಿಗಳನ್ನೂ, ವಿಶೇಷ ಸಂಚಿಕೆಗಳನ್ನೂ ಕನ್ನಡಪ್ರಭದಲ್ಲಿ ಪ್ರಾರಂಭಿಸಿದ ಕೀರ್ತಿ ಅವರದು. ಕನ್ನಡಪ್ರಭದ ಮುಂದಿನ ದಿನಗಳ ನಾಲ್ಕು ಪ್ರಧಾನ ಸಂಪಾದಕರು ವೈಎನ್‌ಕೆ ಗರಡಿಯಲ್ಲಿ ಪಳಗಿದವರೇ ಆಗಿದ್ದಾರೆ. === ವೈ.ಎನ್‌.ಕೆ ವೈಶಿಷ್ಟ್ಯ === ತುಂಟತನ, ಲೇವಡಿ, ಹಾಸ್ಯ, ವಿಡಂಬನೆ, ಮೊನಚು ವ್ಯಂಗ್ಯ ವ್ಯಕ್ತವಾಗುತ್ತಿದ್ದುದು ಅವರು ಬಳಸುತ್ತಿದ್ದ ಪನ್‌ಗಳಲ್ಲಿ. ಉದಾಹರಣೆಗಳೆಂದರೆ, ಇರಾಕ್ ಮತ್ತು ಇರಾನ್ ನಡುವಿನ ಯುದ್ಧದ ಸಮಯದಲ್ಲಿ ಅದರ ತೀವ್ರತೆಯನ್ನು ಅವರು ಬರೆದದ್ದು ಹೀಗೆ: “ಸುಮ್ನೆ ‘ಇರಾನ್’ ಅಂದ್ರೆ ‘ಇರಾಕ್’ ಬಿಡಾಕಿಲ್ಲ”. ಉಳಿದಂತೆ ಅವರು ನೀಡಿದ ಶೀರ್ಷಿಕೆಗಳಿಗೆ ಉದಾಹರಣೆಗಳು- “ವಿಶ್ವಾಮಿತ್ರ ಮೇನಕೆ, ಡ್ಯಾನ್ಸ್ ಮಾಡೋದು ಏನಕೆ?” “ಕಪಿಲವಸ್ತುವಿನ ರಾಜ ಶುದ್ಧೋದನ, ಅವನ ಮಗ ರಾತ್ರೋ ರಾತ್ರಿ ಎದ್ದೋದನ” ಹೀಗೆ ತಮ್ಮ ಬರಹಗಳಲ್ಲಿ, ಸಾಲುಗಳಲ್ಲಿ ಹಾಸ್ಯದ ಎಳೆಯೊಂದಿಗೆ ಪ್ರಖರವಾಗಿ ವೈಎನ್‌ಕೆ ವಿಷಯ ದಾಟಿಸುತ್ತಿದ್ದ ಪರಿ ಅದಮ್ಯವಾದುದು. ತಮ್ಮ ಮದ್ಯ ಪ್ರೀತಿಯನ್ನು ಬರಹಗಳಲ್ಲಿ ನವಿರಾಗಿ ತೋರ್ಪಡಿಸುತ್ತಿದ್ದರು. ಮದ್ಯಕ್ಕೆ ‘ಗುಂಡು’ ಎಂದು ನಾಮಕರಣ ಮಾಡಿ ಜನಪ್ರಿಯಗೊಳಿಸಿದವರು ವೈಎನ್‌ಕೆ. === ಕೃತಿಗಳು === ವಂಡರ್ ಕಣ್ಣು ವಂಡರ್ ಕಂಡರ್ ಮಾತು, ಮಾತು ಮಥಿಸಿ ಕೊನೆ ಸಿಡಿ ತೀರ್ಥರೂಪ === ಉಲ್ಲೇಖಗಳು === ೧) ೧೮/೦೧/೨೦೧೮ರಲ್ಲಿ ಪ್ರಕಟವಾದ ಕನ್ನಡಪ್ರಭ ದಿನಪತ್ರಿಕೆಯ ಸುವರ್ಣಪ್ರಭ ಸಂಚಿಕೆ ೨) ://../?=PsApZlvj1Ok ://..///-